ಶಿರಸಿ: ಕಲಾಸಂಗಮ ಚಾರಿಟೆಬಲ್ ಟ್ರಸ್ಟ್ ರಿ. ಶಿರಸಿ.
ಇದರ 14ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಶಿರಸಿ ರಂಗಧಾಮದಲ್ಲಿ ಜೂ. 1 ರಂದು ನಡೆದ ಯಕ್ಷಗಾನ ಪ್ರದರ್ಶನ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ನೆರವೇರಿಸಿದರು.
ನಂತರ ಮಾತನಾಡುತ್ತಾ ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ಇದರ ಇದನ್ನು ಪ್ರೋತ್ಸಾಹಿಸುವ ಮತ್ತು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೇಶವ ಹೆಗಡೆ ನಾಗರಕುರ ಇವರು ಅಭಿನಂದನಾರ್ಹರು, ಮತ್ತು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕು ಎಂದು ಆಶಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರವೀಂದ್ರ ಭಟ್ಟ ಅಚವೆ, ಇಂದಿನ ಪರಿಸ್ಥಿತಿಯಲ್ಲಿ ಯಕ್ಷಗಾನ ಪ್ರದರ್ಶನದಲ್ಲಿ ಸಭಾ ಲಕ್ಷಣಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಮತ್ತು ತನ್ನನ್ನು ಸನ್ಮಾನಿಸಿದ ಕಲಾಸಂಗಮ ಸಂಸ್ಥೆಯ ಪದಾಧಿಕಾರಿಗಳನ್ನು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಕುಮಾರಿ ಅಭಿಜ್ಞಾ ಹೆಗಡೆ ಇವರಿಗೆ ಯಕ್ಷಗಾನದ ಮಹಿಳಾ ಭಾಗವತಿಕೆಯಲ್ಲಿ ಸಾಧನೆ ಮಾಡುತ್ತಿರುವುದನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಶವ ಹೆಗಡೆ ನಾಗರಕುರ ಇವರು ಸಂಸ್ಥೆಯು ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ವಿವರವಾಗಿ ಮನೆ ಮುಟ್ಟುವ ರೀತಿಯಲ್ಲಿ ಹೇಳಿ, ಎಲ್ಲರನ್ನು ಸ್ವಾಗತಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಶಿರಸಿ ಘಟಕದ ಪದಾಧಿಕಾರಿಗಳಾದ ಕೃಷ್ಣ ಪದಕಿಯವರು ಕೊನೆಯಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಶ್ರೀಲತಾ ಭಟ್ ಹೆಗ್ಗರ್ಸಿಮನೆ ಇವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೋಹಿಣಿ ಹೆಗಡೆ ಶಿರಸಿ ಇವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನಂತರದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರಿಂದ “ಸುದರ್ಶನ ವಿಜಯ”ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗದ ಪ್ರದರ್ಶನ ಸಭಿಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.